somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ನವೆಂಬರ್ 19, 2021

356ನೇ ವಿಧಿ ದುರುಪಯೋಗ - ನಿಯಂತ್ರಣ

356ನೇ ವಿಧಿ ದುರುಪಯೋಗ - ನಿಯಂತ್ರಣ ಶಾಸಕಾಂಗ, ಕಾರ್ಯಂಗ ತಮ್ಮ ಹೊಣೆಗಾರಿಕೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ನಿಭಾಯಿಸುವಲ್ಲಿ ವಿಫಲವಾದಾಗ ಅದನ್ನು ಸರಿದಾರಿಗೆ ತರುವ ಜವಾಬ್ದಾರಿಯನ್ನು ನ್ಯಾಯಾಲಗಳು ಕಾಲದಿಂದ ಕಾಲಕ್ಕೆ ನಿಭಾಯಿಸಿಕೊಂಡು ಬಂದಿವೆ. ಈ ಕಾರಣದಿಂದಲೇ ಶಾಸಕಾಂಗ ಮತ್ತು ಕಾರ್ಯಂಗ ಕೆಲವು ಸಂದರ್ಭದಲ್ಲಿ ಪ್ರದರ್ಶಿಸುವ ಸ್ವೇಚ್ಛಾಚಾರಕ್ಕೆ ಕಡಿವಾಣ ಬಿದ್ದಿದೆ. ಇದಕ್ಕೆ ಪೂರಕವಾಗಿ ಅನೇಕ ನಿದರ್ಶನಗಳು ನಮ್ಮ ಮುಂದಿದೆ. ಸಂವಿಧಾನ ರಚನೆಗೊಂಡ ನಂತರ ಅಧಿಕಾರಸೂತ್ರ ಹಿಡಿದ ಕೇಂದ್ರ ಸರಕಾರಗಳು ಒಂದಲ್ಲ ಒಂದು ಕಾರಣದಿಂದ ಸಂವಿಧಾನದ 356ನೇ ವಿಧಿಯನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷ ದ ಸರಕಾರಗಳನ್ನು ವಜಾ ಮಾಡುತ್ತಿದ್ದವು. ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಕಾಲದಿಂದ ಕಾಲಕ್ಕೆ ಅಧಿಕಾರಸೂತ್ರ ಹಿಡಿದ ಕೇಂದ್ರ ಸರಕಾರಗಳು ನೂರಕ್ಕೂ ಹೆಚ್ಚು ಬಾರಿ ಸಂವಿಧಾನದ 356ನೇ ಕಲಂ ಪ್ರಯೋಗಿಸಿ ಜನತಾಂತ್ರಿಕವಾಗಿ ಆಯ್ಕೆಗೊಂಡ ಸರಕಾರಗಳನ್ನು ವಜಾ ಮಾಡಿವೆ. ಪ್ರಸಕ್ತ ಹಿನ್ನೆಲೆಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿಯವರು ಸಂವಿಧಾನದ 356ನೇ ವಿಧಿ ದುರುಪಯೋಗದ ವಿರುದ್ಧ ನಡೆಸಿದ ಕಾನೂನು ಹೋರಾಟ ನ್ಯಾಯಾಂಗ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲಿನ ತೀರ್ಪಿಗೆ ಕಾರಣವಾಯಿತು. ಸುಪ್ರೀಂಕೋರ್ಟ್‌ನ ಒಂಭತ್ತು ಸದಸ್ಯರ ನ್ಯಾಯಪೀಠ ನೀಡಿದ ತೀರ್ಪಿನ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರಕಾರಗಳನ್ನು ಮನಸ್ಸಿಗೆ ಬಂದ ಹಾಗೆ ವಜಾ ಮಾಡುವ ಕೇಂದ್ರ ಸರಕಾರದ ಸ್ವೇಚ್ಛಾಚಾರಕ್ಕೆ ಕಡಿವಾಣ ಬಿದ್ದಿದೆ. ☀️ ಸಾರ್ವಜನಿಕ ಹಿತಾಸಕ್ತಿಯ ಮನವಿ - ಇತಿಹಾಸ ಇನ್ನು ನ್ಯಾಯಾಂಗ ಇತಿಹಾಸದಲ್ಲಿಯೇ ಸಾರ್ವಜನಿಕ ಹಿತಾಸಕ್ತಿಯ ಮನವಿ ಪರಿಗಣಿಸುವ ಜನಪರ ನಿಲುವಿಗೆ ನಾಂದಿ ಹಾಡಿದವರು ನ್ಯಾಯಾಂಗ ವ್ಯವಸ್ಥೆಯ ದಂತಕಥೆ ವಿ.ಆರ್‌. ಕೃಷ್ಣ ಅಯ್ಯರ್‌. ಬಿಹಾರದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳು ಅನುಭವಿಸುತ್ತಿದ್ದ ನರಕಯಾತನೆ, ಅವರಲ್ಲಿ ಎಷ್ಟೋ ಮಂದಿ ವಿಚಾರಣಾಧೀನ ಕೈದಿಗಳು ಶಿಕ್ಷೆಗೊಳಪಟ್ಟಿದ್ದರೆ ಎಷ್ಟು ದಿನ ಜೈಲಿನಲ್ಲಿರಬೇಕಾಗಿತ್ತೋ ಅದಕ್ಕಿಂತ ಹೆಚ್ಚು ದಿನ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಕೊಳೆಯುತ್ತಿದ್ದ ಪರಿಸ್ಥಿತಿಯ ಮೇಲೆ ದಿನಪತ್ರಿಕೆಯೊಂದರ ವರದಿ ಬೆಳಕು ಚೆಲ್ಲಿತ್ತು. ಈ ಕುರಿತು ಸುಪ್ರೀಂಕೋರ್ಟ್‌ ವಕೀಲ ಕಪಿಲ್‌ ಹಿಂಗರೋಣಿ ನ್ಯಾಯಾಲಯದ ಗಮನ ಸೆಳೆದಿದ್ದರು. ಇದರ ಜೊತೆಗೆ ಸುನೀಲ್‌ ಬಾಟ್ರಾ ಎನ್ನುವ ವಿಚಾರಣಾಧೀನ ಕೈದಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್‌ ಅವರಿಗೆ ಪತ್ರವೊಂದನ್ನು ಬರೆದು ಜೈಲಿನ ನರಕ ಸದೃಶ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದ. ಇದನ್ನೇ ರಿಟ್‌ ಅರ್ಜಿಯಾಗಿ ಪರಿಗಣಿಸಿದ ಕೃಷ್ಣ ಅಯ್ಯರ್‌ ಜೈಲುಗಳು ಕೈದಿಗಳ ಪಾಲಿಗೆ ನರಕ ಆಗಬಾರದು, ಅವರ ಮನಪರಿವರ್ತಿಸುವ ಮಾನವೀಯತೆಯ ನೆಲೆಗಳಾಗಬೇಕು ಎಂದು ತೀರ್ಪು ನೀಡಿದ್ದರು. ಈ ತೀರ್ಪಿನ ನಂತರ ಜೈಲು ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳು ಘಟಿಸಿದವು. ನಂತರದ ದಿನಗಳಲ್ಲಿ ಈ ತರೆನಾದ ರಿಟ್‌ ಅರ್ಜಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎನ್ನುವ ಹೆಸರಿನಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯದಾನದ ನವಮನ್ವಂತರಕ್ಕೆ ನಾಂದಿ ಹಾಡಿದವು.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar